Рет қаралды 4,843
ಓಂಕಾರ ಜ್ಞಾನಾಮೃತ -೨೦೧೩
ವಿಷಯ: ಷೋಡಶ ಸಂಸ್ಕಾರ
‘ಯಾವುದಾದರೊಂದು ನಿರ್ದಿಷ್ಟ ಉದ್ದೇಶಕ್ಕಾಗಿ ವ್ಯಕ್ತಿಯೊಬ್ಬನನ್ನು ಯೋಗ್ಯನನ್ನಾಗಿಸುವುದೇ ಸಂಸ್ಕಾರ’ ಎಂಬ ಉಲ್ಲೇಖ ‘ಶಾಬರ ಭಾಷ್ಯ’ದಲ್ಲಿದೆ. ಇದು ಸಂಸ್ಕಾರಗಳ ಉದ್ದೇಶವನ್ನು ಸರಿಯಾಗಿ ನಿರ್ದೇಶಿಸಿರುವ ಮಾತು ಎಂದು ಹೇಳಬಹುದು. ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಇಲ್ಲಿ ಮಾಡಬೇಕಾದ ಕರ್ತವ್ಯಗಳು ಹಲವು. ಅವು ಅವನ ವಯಸ್ಸು ಮತ್ತು ಸಾಮಾಜಿಕ ಸ್ಥಿತಿಯನ್ನು ಅನುಸರಿಸಿ ಕಾಲದಿಂದ ಕಾಲಕ್ಕೆ ಬದಲಾಗುತ್ತ ಹೋಗುತ್ತವೆ. ಹೀಗೆ ವ್ಯಕ್ತಿಗೂ ಸಮಷ್ಟಿಗೂ ಒದಗುವ ಹಕ್ಕು- ಕರ್ತವ್ಯಗಳ ಹಂಚಿಕೆ ಮತ್ತು ಅವುಗಳ ಘೋಷಣೆಗಳ ಕಲಾಪಗಳನ್ನೇ ‘ಸಂಸ್ಕಾರ’ಗಳು ಎಂದಿರುವುದು. ಜನನಕಾಲದಿಂದಲೂ ನಮಗೆ ಅಂಟಿರಬಹುದಾದ ದೋಷಗಳ ನಿವಾರಣೆಯನ್ನು ಮಾಡುವಂಥವೇ ಸಂಸ್ಕಾರಗಳು ಎನ್ನುವ ನಿಲುವು ಇದ್ದದ್ದನ್ನೂ ಪ್ರಾಚೀನ ಶಾಸ್ತ್ರಗ್ರಂಥಗಳಿಂದ ತಿಳಿದುಬರುವುದು.
ಬೀಜವೊಂದನ್ನು ಭೂಮಿಯಲ್ಲಿ ಬಿತ್ತುವ ಮೊದಲು ಆ ಬೀಜಕ್ಕೆ ಹಲವು ಸಂಸ್ಕರಣಗಳನ್ನು ನಡೆಸಬೇಕಾಗುತ್ತದೆ. ಆಮೇಲೆ ಅದು ಚಿಗುರೊಡೆದು ಬೆಳೆಯುತ್ತಹೋದಂತೆಲ್ಲ ಹಲವು ಕ್ರಿಯೆಗಳನ್ನು ನಡೆಸಬೇಕಾಗುತ್ತದೆ. ಇವು ಆ ಸಸಿಯನ್ನು ಪೋಷಿಸುವುದರ ಜೊತೆಗೆ, ಅದು ತನ್ನ ಉದ್ದೇಶಿತ ಹಂತವನ್ನು ಮುಟ್ಟಬೇಕು; ಆ ಮೂಲಕ ಅದನ್ನು ಬೆಳೆದವನಿಗೂ ಆ ಪರಿಸರಕ್ಕೂ ಒದಗ ಬೇಕಾದಷ್ಟು ಫಲವು ಸರಿಯಾಗಿ ಸಿಗಬೇಕು ಎಂಬುದು ಈ ಒಟ್ಟು ಕ್ರಿಯಾಕಲಾಪಗಳ ಇಂಗಿತವಾಗಿರುತ್ತದೆ. ಅಂತೆಯೇ ಮನುಷ್ಯನ ದಿಟವಾದ ಗುರಿಯನ್ನು ಮುಟ್ಟಿಸಲು ಹಂತ ಹಂತವಾಗಿ ನೆರವಾಗುವಂಥವೇ ಸಂಸ್ಕಾರಗಳು. ಸಂಸ್ಕಾರಗಳು ಎಷ್ಟು? ಇದರ ಬಗ್ಗೆ ಶಾಸ್ತ್ರಗ್ರಂಥಗಳಲ್ಲಿ ಒಂದೇ ಅಭಿಪ್ರಾಯವಿಲ್ಲ. ಆದರೆ ‘ಹದಿನಾರು ಸಂಸ್ಕಾರಗಳು’ (ಷೋಡಶ- ಸಂಸ್ಕಾರಗಳು) ಹೆಚ್ಚು ಮಾನ್ಯತೆಯನ್ನು ಪಡೆದಿರುವ ಲೆಕ್ಕ. ಈ ಹದಿನಾರು ಸಂಸ್ಕಾರಗಳು ಯಾವುವು??
ಬನ್ನಿ ಶತಾವಧಾನಿ ಶ್ರೀ ಆರ್ ಗಣೇಶ್ ಅವರಿಂದ ತಿಳಿದುಕೊಳ್ಳೋಣ.
ಶತಾವಧಾನಿ ಶ್ರೀ ಆರ್ ಗಣೇಶ್ ಇವರಿಂದ ಮಸ್ಕತ್ ನಲ್ಲಿ ಓಂಕಾರ ಜ್ಞಾನಾಮೃತ -೨೦೧೩ ಓಂಕಾರ ಸಮಿತಿಯಿಂದ ಅಯೋಜಿಸಲಾಗಿತ್ತು.